ಕ್ರೀಡೆ
Trending

9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಎಂಎಸ್ ಧೋನಿಗೆ ಸಿಎಸ್​ಕೆ ಫ್ಯಾನ್ಸ್​ನಿಂದಲೇ ಬೈಗುಳ

ಬೆಂಗಳೂರು (ಮಾ. 28): ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK vs RCB) ನಡುವಣ ಐಪಿಎಲ್ 2025ರ ಎಂಟನೇ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ನಂತರ ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎಂಎಸ್ ಧೋನಿ ಬ್ಯಾಟಿಂಗ್ ಮಾಡಲು ಬಂದಿದ್ದು ಎಲ್ಲರಿಗೂ ಅಚ್ಚರಿ ನೀಡಿತು. ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಅನೇಕ ಕ್ರಿಕೆಟ್ ತಜ್ಞರು ಕೂಡ ಆಶ್ಚರ್ಯಚಕಿತರಾದರು. ಚೆನ್ನೈ ಪರ ನಿರ್ಣಾಯಕ ರನ್ ಚೇಸ್ ನಲ್ಲಿ ಮಾಹಿ 9 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ತಂಡಕ್ಕೆ ತುಂಬಾ ಅಗತ್ಯವಿದ್ದಾಗ ಧೋನಿ  ಇಷ್ಟು ಕೆಳಮಟ್ಟದಲ್ಲಿ ಯಾಕೆ ಬ್ಯಾಟಿಂಗ್ ಮಾಡಲು ಬಂದರು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.ಈ ವಿಚಾರವಾಗಿ ಸಿಎಸ್​ಕೆ ಹಾಗೂ ಧೋನಿ ಅಭಿಮಾನಿಗಳೇ ಕೋಪಗೊಂಡಿದ್ದಾರೆ. ಬಳಕೆದಾರರು ಅವರನ್ನು ಸಾಮಾಜಿಕ ಮಾಧ್ಯಮದಲ್ಲಿಯೂ ಟ್ರೋಲ್ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕೂಡ 9 ನೇ ಕ್ರಮಾಂಕದಲ್ಲಿ ಅವರ ಬ್ಯಾಟಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಧೋನಿ 9 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ಬಗ್ಗೆ ಇರ್ಫಾನ್ ಪಠಾಣ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ‘ಧೋನಿ 9 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದನ್ನು ನಾನು ಎಂದಿಗೂ ಬೆಂಬಲಿಸುವುದಿಲ್ಲ. ಇದು ತಂಡಕ್ಕೆ ಸರಿ ಹೊಂದುವುದಿಲ್ಲ’ ಎಂದು ಹೇಳಿದ್ದಾರೆ. ಹಾಗೆಯೆ ಕ್ರಿಕ್‌ಬಜ್‌ನಲ್ಲಿ ಮಾತನಾಡಿದ ಮನೋಜ್ ತಿವಾರಿ, ಧೋನಿ ಅವರ ಅನುಭವವು ಈ ಹಂತದಲ್ಲಿ ಮಹತ್ವದ್ದಾಗಿರುವಾಗ ಮೊದಲೇ ಅವರನ್ನು ಬ್ಯಾಟಿಂಗ್​ಗೆ ಕಳುಹಿಸುವ ಧೈರ್ಯಶಾಲಿ ಕರೆಯನ್ನು ನೀಡಲು ಸಿಎಸ್‌ಕೆ ಆಡಳಿತ ಮಂಡಳಿ ಯಾಕೆ ಹಿಂಜರಿದಿದೆ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.ಇನ್ನೂ ಕೆಲ ಅಭಿಮಾನಿಗಳು, ಪಂದ್ಯ ಮುಗಿಯುವ ಹಂತದಲ್ಲಿ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದು ನಿಜಕ್ಕೂ ನಿರಾಶೆ ಮೂಡಿಸಿದೆ, 6ನೇ ಕ್ರಮಾಂಕದಲ್ಲಿ ಬಂದು ಸಿಎಸ್‌ಕೆ ತಂಡಕ್ಕೆ ಭರವಸೆ ಮೂಡಿಸಬಹುದಿತ್ತು, ನೀವು ನಮ್ಮನ್ನು ಏಕೆ ಮರುಳು ಮಾಡುತ್ತಿದ್ದೀರಿ ಥಲಾ? ಎಂದು ಬರೆದುಕೊಂಡಿದ್ದಾರೆ. ಹಾಗೆಯೆ ಇನ್ನೋರ್ವ ಅಭಿಮಾನಿ, ಕ್ರೀಡಾಂಗಣವನ್ನು ತುಂಬಿಸಿ ಹಣ ಗಳಿಸಲು ಧೋನಿ ಬ್ರಾಂಡ್ ಅನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಧೋನಿ ತಂಡದಲ್ಲಿದ್ದಾರೆ ಎಂದರೆ CSK ಬ್ರಾಂಡ್ ಮೌಲ್ಯವು ಹಾಗೆಯೇ ಉಳಿಯುತ್ತದೆ. ಧೋನಿಯನ್ನು ಕ್ರಿಕೆಟ್ ಕಾರಣಗಳಿಗಾಗಿ ಅಲ್ಲ, ವ್ಯಾಪಾರ ಉದ್ದೇಶಗಳಿಗಾಗಿ ಮಾತ್ರ ಆಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಎಂಎಸ್ ಧೋನಿ 16 ಎಸೆತಗಳಲ್ಲಿ 187.50 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 30 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಪವರ್‌ಪ್ಲೇ ಒಳಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಿಎಸ್‌ಕೆ ತಂಡದ ಅಗ್ರ ಕ್ರಮಾಂಕ ಬ್ಯಾಟರ್​ಗಳು ಯಾರೂ ವೇಗವಾಗಿ ರನ್ ಗಳಿಸುವಲ್ಲಿ ವಿಫಲರಾದರು. ರಿಕ್ವಾರ್ಡ್ ರನ್​ರೇಟ್ ಹೆಚ್ಚುತ್ತಿದ್ದರೂ, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಧೋನಿಗಿಂತ ಮೊದಲು ಕಳುಹಿಸಲಾಯಿತು, ಇದು ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸಿತು. 16 ನೇ ಓವರ್‌ನಲ್ಲಿ ಧೋನಿ ಬ್ಯಾಟಿಂಗ್ ಮಾಡಲು ಬರುವ ಹೊತ್ತಿಗೆ, ಆಟವು ಅದಾಗಲೇ ಸಿಎಸ್​ಕೆ ಕೈಯಿಂದ ಕಳೆದುಹೋಗಿತ್ತು. ಮಾಹಿ ಸ್ವಲ್ಪ ಬೇಗನೆ ಬ್ಯಾಟಿಂಗ್ ಮಾಡಲು ಬಂದಿದ್ದರೆ ಪಂದ್ಯದ ಫಲಿತಾಂಶ ಬೇರೆಯೇ ಆಗುತ್ತಿತ್ತು ಎಂಬುದು ಫ್ಯಾನ್ಸ್ ಅಭಿಪ್ರಾಯ.

Related Articles

Leave a Reply

Your email address will not be published. Required fields are marked *

Back to top button