ಬೆಂಗಳೂರಿಗೆ ಇನ್ನೂ 6 ಟಿಎಂಸಿ ಕಾವೇರಿ ನೀರು ತರ್ತೇವೆ.

ಬೆಂಗಳೂರಿನ ಉದ್ಯಮಗಳಿಗೆ ನೀರಿನ ಅಭಾವವನ್ನು ನಿವಾರಿಸಲು ಕಾವೇರಿ ನದಿಯಿಂದ 6 ಟಿಎಂಸಿ ನೀರನ್ನು ತರಲು ಕರ್ನಾಟಕ ಸರ್ಕಾರ ಯೋಜನೆ ರೂಪಿಸಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಾತನಾಡಿದ ಅವರು, ಉದ್ಯಮಗಳಿಗೆ ನೀರು, ವಿದ್ಯುತ್ ಮತ್ತು ಭೂಮಿಯನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.ಬೆಂಗಳೂರು ನಗರದಲ್ಲಿ ಉದ್ಯಮಗಳಿಗೆ ನೀರಿನ ಅಗತ್ಯವಿದೆ. ಹಾಗಾಗಿ ಕಾವೇರಿ ನದಿಯಿಂದ ಇನ್ನೂ 6 ಟಿಎಂಸಿ ನೀರು ತರುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆ ನನ್ನ ಬಳಿಯೇ ಇದೆ. ಯಾವ ಬೆಲೆ ತೆತ್ತಾದರೂ 6 ಟಿಎಂಸಿ ನೀರು ತರಲಾಗುವುದು ಎಂದು ಹೇಳಿದ್ದಾರೆ.
ನೀರಿನ ಬಗ್ಗೆ ಯೋಚನೆ ಮಾಡಬೇಡಿ. ಎತ್ತಿನಹೊಳೆ ಮೂಲಕ ನೀರು ಕೊಡುವ ಚಿಂತನೆ ನಡೆಸಿದೆ. ನೀರು, ವಿದ್ಯುತ್, ಜಾಗ ಕೊಡಲು ನಮ್ಮ ಸರ್ಕಾರ ಸಿದ್ಧ. 19 ದೇಶಗಳಿಂದ ಬಂದು ಹೂಡಿಕೆಗೆ ಒಪ್ಪಂದ ಮಾಡಲಾಗಿದೆ. ನಮ್ಮಲ್ಲಿನ ಸಮುದ್ರಗಳು ಕೂಡ ಗೋವಾಗಿಂತ ಕಡಿಮೆ ಇಲ್ಲ ಎಂದಿದ್ದಾರೆ.ಜತೆಗೆ ಇಲ್ಲಿನ ಟ್ರಾಫಿಕ್ ಸಮಸ್ಯೆ ಸಹ ಬಗೆಹರಿಸಲಾಗುವುದು. ಉದ್ಯಮಿಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಬೆಂಗಳೂರಿನಿಂದ ಆಚೆಗೂ ಯೋಜನೆಗಳಿಗೆ ಸ್ಪಂದಿಸಬೇಕು. ಈಗ ರಸ್ತೆ ಅಗಲೀಕರಣ ಸಾಧ್ಯವಿಲ್ಲ. ನಗರದಲ್ಲಿ ಟ್ರಾಫಿಕ್ ಕಂಟ್ರೋಲ್ ಬಗ್ಗೆ ಚಿಂತನೆ ನಡೆಸಿದ್ದೇವೆ. ಡಬಲ್ ಡೆಕ್ಕರ್ ರಸ್ತೆ ಮಾಡಿದ್ದೇವೆ, ಟನಲ್ ಮಾಡುವ ಯೋಚನೆ ಇದೆ. ನಿಮ್ಮ ಬಗ್ಗೆ ಸರ್ಕಾರ ಬಹಳ ಚಿಂತನೆ ಮಾಡಿದೆ ಎಂದರು.ಕರ್ನಾಟಕ ಸರ್ಕಾರದ ಪರವಾಗಿ ಎಲ್ಲರಿಗೂ ಧನ್ಯವಾದ ಹೇಳಿದ ಡಿಕೆ ಶಿವಕುಮಾರ್, ನೀವೇ ನಮ್ಮ ಆಸ್ತಿ, ನೀವು ಸ್ಟ್ರಾಂಗ್ ಇದ್ದರೆ ನಾವು ಸ್ಟ್ರಾಂಗ್. ನೀವು ವೀಕ್ ಆದರೆ, ನಾವು ವೀಕ್ ಆಗ್ತೀವಿ ಎಂದಿದ್ದಾರೆ. ಸಣ್ಣ ಉದ್ಯಮಗಳ ಮೂಲಕ ಜನರಿಗೆ ಉದ್ಯೋಗ ನೀಡಿದ್ದೀರಿ. ಕರ್ನಾಟಕಕ್ಕೆ ದೊಡ್ಡ ಇತಿಹಾಸವಿದೆ. ನಮಗೆ ಕಾರ್ಮಿಕರು ಬೇಕು, ಕಾರ್ಮಿಕರಿಗೆ ಶಕ್ತಿ ತುಂಬಬೇಕು. ಸರ್ಕಾರ ಯಾವಾಗಲೂ ನಿಮ್ಮ ಬಗ್ಗೆ ಆಲೋಚಿಸಿದಾಗ ಮಾತ್ರ, ನೀವು ನಮ್ಮ ಸಹಾಯಕ್ಕೆ ನಿಲ್ಲುತ್ತೀರಿ. ನಿಮಗೆ ಕಡಿಮೆ ಬಡ್ಡಿಗೆ ಹಣ, ಜಮೀನು ಕೊಟ್ಟರೆ ಕೆಲಸ ಮಾಡುತ್ತೀರಿ ಎಂದು ಹೇಳಿದ್ದಾರೆ.



