ನೀರಿಲ್ಲದೆ ಬರಿದಾಗಿದ್ದ ಪಾಕ್ಗೆ ಸಲಾಲ್, ಬಾಗ್ಲಿಹಾರ್ ಅಣೆಕಟ್ಟಿನಿಂದ ನೀರು ಬಿಟ್ಟ ಭಾರತ, ಈಗ ಪ್ರವಾಹ ಭೀತಿ

ನವದೆಹಲಿ: ಅಯ್ಯೋ ನೀರಿಲ್ಲ ಎಂದು ಬಾಯಿ ಬಡಿದುಕೊಳ್ಳುತ್ತಿದ್ದ ಪಾಕಿಸ್ತಾನ(Pakistan)ಕ್ಕೆ ಭಾರತ ಇದೀಗ ಸಲಾಲ್ ಹಾಗೂ ಬಾಗ್ಲಿಹಾರ್ ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡಿದ್ದು, ಪ್ರವಾಹ ಭೀತಿ ಎದುರಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣವಿದೆ. ಮೇ 6-7ರ ರಾತ್ರಿ ಭಾರತ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿ ನಾಶಪಡಿಸಿತ್ತು.ಗುರುವಾರವೂ ಭಾರತವು ಲಾಹೋರ್ ಮತ್ತು ಕರಾಚಿ ಸೇರಿದಂತೆ ಪಾಕಿಸ್ತಾನದ 9 ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿತ್ತು. ಈ ದಾಳಿಯು ಕರಾಚಿ ಬಂದರು, ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ ಮತ್ತು ಯುದ್ಧ ವಿಮಾನಗಳು ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಧ್ವಂಸವನ್ನುಂಟುಮಾಡಿದೆ. ಈಗ ಭಾರತ ಪಾಕಿಸ್ತಾನದ ವಿರುದ್ಧ ಜಲದಾಳಿ ನಡೆಸಿದೆ.
ಈ ಪ್ರದೇಶದಲ್ಲಿ ಭಾರೀ ಮಳೆಯಾದ ನಂತರ ಗೇಟ್ಗಳನ್ನು ತೆರೆಯಲಾಯಿತು. ಭಾರೀ ಮಳೆಯಿಂದಾಗಿ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ, ನೀರನ್ನು ಬಿಡುಗಡೆ ಮಾಡಬೇಕಾಯಿತು. ಗುರುವಾರ ಸಲಾಲ್ ವಿದ್ಯುತ್ ಯೋಜನೆಯ ಮೂರು ಗೇಟ್ಗಳು ಮತ್ತು ಬಾಗ್ಲಿಹಾರ್ ಯೋಜನೆಯ ಎರಡು ಗೇಟ್ಗಳನ್ನು ತೆರೆಯಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸಿದ ನಂತರ, ಪಾಕಿಸ್ತಾನಕ್ಕೆ ನೀರು ಹರಿಯುವುದನ್ನು ನಿಲ್ಲಿಸಲು ಕಳೆದ ವಾರ ಸಲಾಲ್ ಮತ್ತು ಬಾಗ್ಲಿಹಾರ್ ಯೋಜನೆಗಳ ಗೇಟ್ಗಳನ್ನು ಮುಚ್ಚಿದ್ದರಿಂದ ಚೆನಾಬ್ ನದಿಯಲ್ಲಿ ನೀರಿನ ಮಟ್ಟವು ದಾಖಲೆಯ ಕನಿಷ್ಠ ಮಟ್ಟಕ್ಕೆ ಇಳಿದಿತ್ತು.ಗೇಟ್ಗಳನ್ನು ಮುಚ್ಚಿದ್ದರಿಂದ, ಚೆನಾಬ್ ನದಿ ಬತ್ತಿ ಹೋಗಿದ್ದರಿಂದ ಪಾಕಿಸ್ತಾನಕ್ಕೆ ನೀರಿನ ಹರಿವು ಕಡಿಮೆಯಾಯಿತು. ಮೊದಲ ಬಾರಿಗೆ, ಜಮ್ಮು ಪ್ರದೇಶದ ಅಖ್ನೂರ್ ಪ್ರದೇಶದಲ್ಲಿ ಜನರು ಕಾಲ್ನಡಿಗೆಯಲ್ಲಿ ಚೆನಾಬ್ ನದಿಯನ್ನು ದಾಟಿದ್ದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. ಇದರ ಅಡಿಯಲ್ಲಿ, ಚೆನಾಬ್ ನದಿಗೆ ನಿರ್ಮಿಸಲಾದ ಸಲಾಲ್ ಅಣೆಕಟ್ಟಿನ ಎಲ್ಲಾ ದ್ವಾರಗಳನ್ನು ಮುಚ್ಚಲಾಯಿತು. ಈಗ ಭಾರತ ಚೆನಾಬ್ ನದಿ ಮತ್ತು ಸಲಾಲ್ ಅಣೆಕಟ್ಟಿನ ನೀರನ್ನು ಬಿಡುಗಡೆ ಮಾಡಿದೆ.ರಿಯಾಸಿಯಲ್ಲಿರುವ ಸಲಾಲ್ ಅಣೆಕಟ್ಟಿನ ಮೂರು ದ್ವಾರಗಳನ್ನು ಭಾರತದ ಕಡೆಯಿಂದ ತೆರೆಯಲಾಗಿದೆ. ಅದೇ ಸಮಯದಲ್ಲಿ, ರಾಂಬನ್ನಲ್ಲಿ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ಗೇಟ್ ಅನ್ನು ತೆರೆಯಲಾಗಿದೆ.
ನಿನ್ನೆ ರಾತ್ರಿ ಪಾಕಿಸ್ತಾನ ಮತ್ತೊಮ್ಮೆ ಭಾರತದ ಮೇಲೆ ದಾಳಿ ಮಾಡಲು ವಿಫಲ ಪ್ರಯತ್ನ ಮಾಡಿದೆ. ಮೂಲಗಳ ಪ್ರಕಾರ, ನಿನ್ನೆ ರಾತ್ರಿ ಪಾಕಿಸ್ತಾನ ನಿಯಂತ್ರಣ ರೇಖೆ (ಎಲ್ಒಸಿ) ಮತ್ತು ಅಂತಾರಾರಾಷ್ಟ್ರೀಯ ಗಡಿಗಳು (ಐಬಿ) ಉದ್ದಕ್ಕೂ ವಿವಿಧ ಸ್ಥಳಗಳಿಗೆ ಸಮೂಹ ಡ್ರೋನ್ಗಳನ್ನು ಕಳುಹಿಸಲು ವಿಫಲ ಪ್ರಯತ್ನಗಳನ್ನು ಮಾಡಿದಾಗ, ಉಧಂಪುರ, ಸಾಂಬಾ, ಜಮ್ಮು, ಅಖ್ನೂರ್, ನಾಗ್ರೋಟಾ ಮತ್ತು ಪಠಾಣ್ಕೋಟ್ ವಲಯಗಳಲ್ಲಿ ಭಾರತೀಯ ಸೇನೆಯ ವಾಯು ರಕ್ಷಣಾ ಘಟಕಗಳು ನಡೆಸಿದ ಬೃಹತ್ ಪ್ರತಿ-ಡ್ರೋನ್ ಕಾರ್ಯಾಚರಣೆಯಲ್ಲಿ 50 ಕ್ಕೂ ಹೆಚ್ಚು ಡ್ರೋನ್ಗಳನ್ನು ಯಶಸ್ವಿಯಾಗಿ ತಟಸ್ಥಗೊಳಿಸಲಾಯಿತು.ಈ ಎನ್ಕೌಂಟರ್ನಲ್ಲಿ ಎಲ್-70 ಬಂದೂಕುಗಳು, ಜು-23 ಎಂಎಂ, ಶಿಲ್ಕಾ ವ್ಯವಸ್ಥೆಗಳು ಮತ್ತು ಇತರ ಸುಧಾರಿತ ಕೌಂಟರ್-ಯುಎಎಸ್ ಉಪಕರಣಗಳ ವ್ಯಾಪಕ ಬಳಕೆ ಕಂಡುಬಂದಿತು, ಇದು ವೈಮಾನಿಕ ಬೆದರಿಕೆಗಳನ್ನು ಎದುರಿಸಲು ಸೇನೆಯ ಬಲವಾದ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.
ಮತ್ತೊಂದೆಡೆ, ಈ ಸಮಯದಲ್ಲಿ, ಜಮ್ಮುವಿನ ಸಾಂಬಾ ಜಿಲ್ಲೆಯಲ್ಲಿ, ಅಂತಾರಾಷ್ಟ್ರೀಯ ಗಡಿಯಲ್ಲಿ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ಬಿಎಸ್ಎಫ್ ವಿಫಲಗೊಳಿಸಿತು. ಅಂತಾರಾಷ್ಟ್ರೀಯ ಗಡಿಯಿಂದ ಸಾಂಬಾ ಸೆಕ್ಟರ್ನಲ್ಲಿ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸುವಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಏಳು ಭಯೋತ್ಪಾದಕರನ್ನು ಕೊಂದಿದೆ. 10-12 ಭಯೋತ್ಪಾದಕರು ಒಳನುಸುಳಲು ಯೋಜನೆ ರೂಪಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಉಳಿದ ಭಯೋತ್ಪಾದಕರು ಪಾಕಿಸ್ತಾನದ ಕಡೆಗೆ ಪಲಾಯನ ಮಾಡಿದ್ದಾರೆ ಎನ್ನಲಾಗಿದೆ.



