ವಿದೇಶ
Trending

ನಮ್ಮ ವಾಯುನೆಲೆಗಳನ್ನು ಭಾರತದ ಕ್ಷಿಪಣಿಗಳು ಉಡಾಯಿಸಿದೆ, ಕೊನೆಗೂ ಒಪ್ಪಿಕೊಂಡ ಪಾಕ್​​ ಪ್ರಧಾನಿ

ಪಾಕಿಸ್ತಾನದ ವಾಯುನೆಲೆಗಳ ಮೇಲೆ ಭಾರತ ದಾಳಿ ಮಾಡಿಲ್ಲ ಎಂದು ವಾದಿಸುತ್ತಿದ್ದ ಪಾಕ್ ಇದೀಗ ನಿಜ ಒಪ್ಪಿಕೊಂಡಿದೆ. ಭಾರತ ನಮ್ಮ ಮೇಲೆ ದಾಳಿ ಮಾಡಿದೆ, ನಮ್ಮ ವಾಯುನೆಲೆಗಳನ್ನು ಉಡಾಯಿಸಿದೆ ಎಂದು ಸ್ವತಃ ಪಾಕ್​ ಪ್ರಧಾನಿಯೇ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರು, ಮೇ 10 ರ ಮುಂಜಾನೆ ಭಾರತೀಯ ಬ್ಯಾಲಿಸ್ಟಿಕ್ ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಪಾಕಿಸ್ತಾನದೊಳಗಿನ ಇತರ ವಾಯು ನೆಲೆ ಹಾಗೂ ಸಾರ್ವಜನಿಕ ಪ್ರದೇಶದ ಮೇಲೆ ದಾಳಿ ಮಾಡಿದೆ ಎಂದು ಹೇಳಿದ್ದಾರೆ. ಅವರು ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ಭಾರತ ನಡೆಸಿದ ಕ್ಷಿಪಣಿ ದಾಳಿಯ ಬಗ್ಗೆ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ (Asim Munir) ಅವರು ಬೆಳಗಿನ ಜಾವ 2:30 ಕ್ಕೆ ಕರೆ ಮಾಡಿ ಎಲ್ಲವನ್ನು ವಿವರಿಸಿದರು ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ವಿಡಿಯೋವೊಂದುನ್ನು ಹಂಚಿಕೊಂಡಿದ್ದಾರೆ.

ಮೇ 9-10ರ ಮಧ್ಯರಾತ್ರಿ, ಬೆಳಗಿನ ಜಾವ 2:30 ರ ಸುಮಾರಿಗೆ, ಜನರಲ್ ಆಸಿಫ್ ಮುನೀರ್ ಫೋನ್ ಮೂಲಕ ಕರೆ ಮಾಡಿ, ಭಾರತ ನಮ್ಮ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಹೇಳಿದರು. ನೂರ್ ಖಾನ್ ವಾಯುನೆಲೆ ಮತ್ತು ಕೆಲವು ಇತರ ಪ್ರದೇಶಗಳ ಮೇಲೆ ದಾಳಿ ಮಾಡಿದೆ. ಎಂದು ಪ್ರಧಾನಿ ಷರೀಫ್ ಸಾರ್ವಜನಿಕ ಭಾಷಣದಲ್ಲಿ ಹೇಳಿಕೊಂಡಿದ್ದಾರೆ. ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್ ನಡುವೆ ಇರುವ ನೂರ್ ಖಾನ್ ವಾಯುನೆಲೆಯು, ಪಾಕಿಸ್ತಾನದ ವಾಯು ಕಾರ್ಯಾಚರಣೆಗೆ ಕೇಂದ್ರ ಬಿಂದುವಾಗಿದೆ. ಜತೆಗೆ ಇದು ಒಂದು ಕಾರ್ಯತಂತ್ರದ ಮಿಲಿಟರಿ ಸೌಲಭ್ಯವಾಗಿದೆ. ಇದು ಹಿಂದೆ ಚಕ್ಲಾಲಾ ವಾಯುನೆಲೆ ಎಂದು ಕರೆಯಲ್ಪಡುತ್ತಿತ್ತು. ಇದನ್ನು 1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಪಡೆಗಳನ್ನು ಗುರಿಯಾಗಿ ನಿರ್ಮಾಣ ಮಾಡಲಾಗಿತ್ತು.

ಭಾರತವು ನೂರ್ ಖಾನ್ ವಾಯುನೆಲೆ ಮತ್ತು ಇತರ ಹಲವಾರು ಸ್ಥಳಗಳ ಮೇಲೆ ಬಾಂಬ್ ದಾಳಿ ಮಾಡಿದೆ ಎಂದು ಜನರಲ್ ಅಸಿಮ್ ಮುನೀರ್ ಬೆಳಗಿನ ಜಾವ 2:30 ಮಾಹಿತಿ ನೀಡಿದರು. ಆ ದಾಳಿ ನಡೆದ ಸುದ್ದಿ ಕೇಳಿ ನನಗೆ ನಿದ್ದೆ ಬಂದಿರಲಿಲ್ಲ, ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ. ಇದೀಗ ಈ ಬಗ್ಗೆ ಎಕ್ಸ್​​​ ಮೂಲಕ ಟ್ವೀಟ್​​ ಮಾಡಿದ ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ, ಇದು ಆಪರೇಷನ್ ಸಿಂದೂರ್​​​​ ನಿಖರತೆ ಹಾಗೂ ಧೈರ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಪಾಕ್​​ ಪ್ರಧಾನಿ ಮಾಡಿರುವ ಭಾಷಣವನ್ನು ಹಂಚಿಕೊಂಡಿದ್ದಾರೆ.

ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಭಾರತೀಯರು ಸಾವನ್ನಪ್ಪಿದರು. ಇದರ ಪ್ರತಿಕಾರಕ್ಕಾಗಿ ಭಾರತೀಯ ಸೇನೆ ಮೇ 7 ರಂದು ಆಪರೇಷನ್ ಸಿಂದೂರ್ ಕಾರ್ಯಚರಣೆಯನ್ನು ನಡೆಸಿತ್ತು. ಸರ್ಕಾರಿ ಮೂಲಗಳ ಪ್ರಕಾರ, ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ನಂತಹ ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಲಾಗಿತ್ತು. ಸುಮಾರು 100 ಭಯೋತ್ಪಾದಕರನ್ನು ಈ ಕಾರ್ಯಾಚರಣೆಯಲ್ಲಿ ನಿರ್ಮೂಲನೆ ಮಾಡಲಾಗಿದೆ.ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಾದ್ಯಂತ ಭಯೋತ್ಪಾದಕ ಮೂಲಸೌಕರ್ಯ ಮತ್ತು ಕಾರ್ಯತಂತ್ರದ ಮಿಲಿಟರಿ ಸ್ಥಾಪನೆಗಳ ಮೇಲೆ ದಾಳಿ ಮಾಡಲು ಭಾರತೀಯ ವಾಯುಪಡೆ (ಐಎಎಫ್), ಭಾರತೀಯ ಸೇನೆ ಮತ್ತು ನೌಕಾಪಡೆ ಒಟ್ಟಾಗಿ ಕೆಲಸ ಮಾಡಿತ್ತು. 11 ಸ್ಥಳಗಳ ಮೇಲೆ ಭಾರತ ದಾಳಿ ನಡೆಸಿತ್ತು. ವಾಯುನೆಲೆಗಳು, ರಾಡಾರ್ ಕೇಂದ್ರಗಳು ಮತ್ತು ಸಂವಹನ ಕೇಂದ್ರಗಳು ಇದರ ಪ್ರಮುಖ ಗುರಿಯಾಗಿತ್ತು.ಮೇ 10 ರ ಚಕ್ಲಾಲಾ (ನೂರ್ ಖಾನ್) ಮತ್ತು ಸರ್ಗೋಧಾದಲ್ಲಿರುವ ಪಿಎಎಫ್ ನೆಲೆಗಳು ಮೇಲೆ ಭಾರತ ಮೊದಲು ದಾಳಿಯನ್ನು ನಡೆಸಿತ್ತು. ನಂತರ ಜಾಕೋಬಾಬಾದ್, ಭೋಲಾರಿ ಮತ್ತು ಸ್ಕಾರ್ಡುಗಳ ಮೇಲೆ ದಾಳಿ ನಡೆಸಿತ್ತು. ನಂತರ ತನ್ನ ವಾಯು ನೆಲೆಗಳ ಮೇಲೆ ದಾಳಿಯನ್ನು ನಡೆಸಿದೆ ಎಂದು ಅಮೆರಿಕದ ಸಹಾಯವನ್ನು ಪಡೆದು ಕದನ ವಿರಾಮ ಘೋಷಣೆಯನ್ನು ಮಾಡಿತ್ತು.

Related Articles

Leave a Reply

Your email address will not be published. Required fields are marked *

Back to top button