ಎರಡು ವರ್ಷಗಳಿಂದ ಬಾಕಿ ಇರುವ ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರದ ಮತ್ತೆ ಪ್ರಯತ್ನ ಆರಂಭಿಸಿದೆ. ಹೈಕೋರ್ಟ್ 2022ರ ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸಬೇಕೆಂದು ಆದೇಶ ನೀಡಿದ ಎರಡು ತಿಂಗಳ ನಂತರ ಎಚ್ಚೆತ್ತುಕೊಂಡಿರುವ ಸರ್ಕಾರ ಇದೀಗ ಮತ್ತೆ ೩ ತಿಂಗಳು ಕಾಲಾವಕಾಶ ಕೇಳಿದೆ.
ಈ ಕುರಿತು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುವ ನಗರಾಭಿವೃದ್ಧಿ ಇಲಾಖೆ ಹಿಂದುಳಿದ ವರ್ಗಗಳ ಮೀಸಲಾತಿ ಸಂಬಂಧ ನ್ಯಾ. ಭಕ್ತವವತ್ಸಲ ಸಮಿತಿಯಿಂದ ಮಾಹಿತಿ ಕೇಳಲಾಗಿದೆ. ಅದು ರಾಜಕೀಯ ಹಿಂದುಳಿದಿರುವಿಕೆ ಬಗ್ಗೆಯೂ ಮಾಹಿತಿ ನೀಡಲು ನ್ಯಾ. ಭಕ್ತವತ್ಸಲ ಸಮಿತಿ ಕಾಲಾವಕಾಶ ಕೇಳಿದೆ. ಹಾಗಾಗಿ 3 ತಿಂಗಳು ಕಾಲಾವಕಾಶ ನೀಡುವಂತೆ ಮನವಿ ಮಾಡಿದೆ.
ಮೊದಲೇ ನ್ಯಾಯಾಲಯ ಸೂಚನೆ ನೀಡಿದ್ದರಂತೆ ನ.30 ರೊಳಗೆ ಸರ್ಕಾರ ಮೀಸಲಾತಿ ಪಟ್ಟಿ ಪ್ರಕಟಿಸಬೇಕಿತ್ತು. ಆದರೆ ಇದೀಗ ಸರ್ಕಾರ ಮತ್ತೆ ಕಾಲಾವಕಾಶ ಕೋರಿರುವುದರಿಂದ ಚುನಾವಣೆ ಅನುಮಾನವಾಗಿದೆ.
ಚುನಾವಣೆ ನಡೆಸಲು ಒಲ್ಲದ ಮನಸ್ಸಿನಿಂದ ಸರಕಾರ ಕೆಲವು ಪ್ರಕ್ರಿಯೆ ನಡೆಸಿದೆಯೇ ಹೊರತು ನಿಜಕ್ಕೂ ಅದಕ್ಕೆ ವಿಧಾನಸಭಾ ಚುನಾವಣೆ ನಡೆಯುವವರೆಗೆ ಪಾಲಿಕೆ ಚುನಾವಣೆ ನಡೆಸುವ ಉತ್ಸುಕತೆ ಇಲ್ಲ. ಏಕಸದಸ್ಯಪೀಠದ ಆದೇಶದ ವಿರುದ್ಧ ಮೇಲ್ಮನವಿ: ಈ ಮಧ್ಯೆ, ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಒಂದೇ ವಾರ್ಡ್ನ ಮತದಾರನ್ನು ಎರಡು ವಿಧಾನಸಭಾ ಕ್ಚೇತ್ರಗಳಿಗೆ ಹಂಚಿಕೆ ಮಾಡಿರುವ ಸಂಬಂಧ ಏಕ ಸದಸ್ಯಪೀಠದ ಆದೇಶದಲ್ಲಿ ಯಾವುದೇ ಪ್ರಸ್ತಾಪ ಮಾಡದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಸತೀಶ್ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪಿ.ಬಿ.ವರಲೆ ಅವರಿದ್ದ ನ್ಯಾಯಪೀಠ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ. ವಾದ ಆಲಿಸಿದ ನ್ಯಾಯಪೀಠ ಸರ್ಕಾರ, ಬಿಬಿಎಂಪಿ, ನಗರಾಭಿವೃದ್ಧಿ ಇಲಾಖೆ, ರಾಜ್ಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್, ಬಿಬಿಎಂಪಿ ಕಾಯಿದೆ ಸೆಕ್ಷನ್ 7(ಬಿ) ಪ್ರಕಾರ ವಿಧಾನಸಭೆ ಸದಸ್ಯರ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯೊಳಗೆ ವಾರ್ಡ್ ಗಳ ವಿಭಾಗಿಸಬೇಕು. ಯಾವುದೇ ವಾರ್ಡ್ ನ್ನು ಇತರೆ ಕ್ಷೇತ್ರಗಳಿಗೆ ವಿಸ್ತರಿಸಬಾರದು ಎಂದು ಹೇಳಲಾಗಿದೆ. ಆದರೆ, ಹುಳಿಮಾವು ವಾರ್ಡ್ ಪುನರ್ ವಿಂಡನೆ ವಿಚಾರದಲ್ಲಿ ಬೊಮ್ಮನಹಳ್ಳಿ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಸೇರಿಸಲಾಗಿದೆ.
ಅಲ್ಲದೆ, ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಹುಳಿಮಾವು ವಾರ್ಡ್ ನಲ್ಲಿ ಈ ಹಿಂದ ಇದ್ದ 14 ವಾರ್ಡ್ ಗಳ ಜತೆಗೆ ಹೆಚ್ಚುವರಿಯಾಗಿ 6 ವಾರ್ಡ್ ಗಳನ್ನು ಸೇರ್ಪಡೆ ಮಾಡಲಾಗಿದೆ. ಇವುಗಳಲ್ಲಿ ಒಂದಾದ ಹುಳಿಮಾವು ವಾರ್ಡ್ (239) ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ ಮತ್ತು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಸೇರಿ ಎರಡೂ ವಾರ್ಡ್ ಗಳಲ್ಲಿ ಸೇರಿಹೋಗಿದೆ. ಇದು ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಕಾಯಿದೆ 2020 ಸೆಕ್ಷನ್ 7ಕ್ಕೆ ವಿರುದ್ಧವಾಗಿದೆ. ರಾಜ್ಯ ಸರ್ಕಾರ ವಾರ್ಡ್ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ತಾನು ಹೊರಡಿಸಿರುವ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿದೆ. ಇದರಿಂದ ಮತದಾರರಿಗೆ ತೀವ್ರ ತರದ ಗೊಂದಲಗಳುಂಟಾಗಲಿದೆ. ಈ ಸಂಬಂಧ ಪುನರ್ ಪರಿಶೀಲನೆ ಮಾಡುವಂತೆ ಕೋರಿ ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪರಿಗಣಿಸಬೇಕು ಎಂದು ಅರ್ಜಿದಾರರು ಏಕ ಸದಸ್ಯ ಪೀಠದಲ್ಲಿ ಮನವಿ ಮಾಡಿದ್ದರು. ಈ ಸಂಬಂಧ ಏಕ ಸದಸ್ಯ ಪೀಠದಲ್ಲಿ ಸಲ್ಲಿಕೆ ಮಾಡಿದ್ದ ಮನವಿಯನ್ನು ಪರಿಗಣಿಸಿಲ್ಲ. ಆದ್ದರಿಂದ ಕ್ಷೇತ್ರ ಪುನರ್ ವಿಂಗಡಣೆ ಅಧಿಸೂಚನೆ ರದ್ದು ಮಾಡಬೇಕು ಎಂದು ಮನವಿ ಮಾಡಿದರು.



