ಕ್ರೀಡೆ

ಕನ್ನಡಿಗನ ಕೈ ಹಿಡಿದ ಗೌತಮ್ ಗಂಭೀರ್​ಗೆ ಸಿಕ್ತು ಗಜಬಲ

Champions Trophy 2025: ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಅತೀ ಹೆಚ್ಚು ಚರ್ಚೆಗೀಡಾಗಿದ್ದು ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರಗಳು. ಒಂದೆಡೆ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕ ಬದಲಿಸಿದರೆ, ಮತ್ತೊಂದೆಡೆ ಯಶಸ್ವಿ ಜೈಸ್ವಾಲ್ ಅವರನ್ನು ಕೈ ಬಿಟ್ಟು ವರುಣ್ ಚಕ್ರವರ್ತಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಈ ಬದಲಾವಣೆಗಳ ಫಲವಾಗಿ ಇದೀಗ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ.ಜನವರಿ 18, 2025… ಮುಂಬೈನಲ್ಲಿರುವ ಬಿಸಿಸಿಐ ಕಛೇರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದ ಘೋಷಣೆಗಾಗಿ ಸುದ್ದಿಗೋಷ್ಠಿ ಕರೆಯಲಾಗಿತ್ತು. ಈ ಸುದ್ದಿಗೋಷ್ಠಿಗೆ ನಿಗದಿಯಾಗಿದ್ದ ಸಮಯ ಮಧ್ಯಾಹ್ನ 12.30. ಆದರೆ ಭಾರತ ತಂಡದ ಘೋಷಣೆಯಾಗಿದ್ದು 3 ಗಂಟೆಗೆ. ಹೀಗೆ ಎರಡೂವರೆ ಗಂಟೆ ವಿಳಂಬವಾಗಲು ಮುಖ್ಯ ಕಾರಣ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್​ ನಡುವಣ ಭಿನ್ನಾಭಿಪ್ರಾಯ.ಈ ಭಿನ್ನಾಪ್ರಾಯಕ್ಕೆ ಕಾರಣ ವಿಕೆಟ್​ ಕೀಪರ್​ಗಳ ಆಯ್ಕೆ. ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ರಿಷಭ್ ಪಂತ್ ಮೇಲೆ ಹೆಚ್ಚಿನ ಒಲವು ಹೊಂದಿದ್ದರು. ಆದರೆ ಇತ್ತ ಕೋಚ್ ಗೌತಮ್ ಗಂಭೀರ್ ಕೆಎಲ್ ರಾಹುಲ್ ಹಾಗೂ ಸಂಜು ಸ್ಯಾಮ್ಸನ್ ಅವರ ಆಯ್ಕೆಗೆ ಪಟ್ಟು ಹಿಡಿದಿದ್ದರು.ಈ ಚರ್ಚೆ ಮುಂದುವರೆದು ಅಂತಿಮವಾಗಿ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು. ಆದರೆ ಇಲ್ಲಿ ಅಜಿತ್ ಅಗರ್ಕರ್ ಅವರ ಮೊದಲ ಆಯ್ಕೆ ರಿಷಭ್ ಪಂತ್ ಆಗಿದ್ದರು. ಆಯ್ಕೆ ಸಮಿತಿ ಮುಖ್ಯಸ್ಥನ ಈ ನಿರ್ಧಾರಕ್ಕೆ ಗೌತಮ್ ಗಂಭೀರ್ ಅಸಮ್ಮತಿ ಸೂಚಿಸಿದ್ದರು.ಚರ್ಚೆ ಮುಂದುವರೆಯಿತು. ಅಂತಿಮವಾಗಿ ತಂಡವು ಫೈನಲ್ ಆಯಿತು. ಚಾಂಪಿಯನ್ಸ್ ಟ್ರೋಫಿ ತಂಡದ ಘೋಷಣೆ ವೇಳೆ ಅಜಿತ್ ಅಗರ್ಕರ್ ರಿಷಭ್ ಪಂತ್ ಅವರನ್ನು ತಂಡದ ಮೊದಲ ವಿಕೆಟ್ ಕೀಪರ್ ಎಂದು ಒತ್ತಿ ಹೇಳಿದ್ದರು. ಆದರೆ ಆ ಬಳಿಕ ನಡೆದಿದ್ದೇ ಗೌತಮ್ ಗಂಭೀರ್ ಆಟ.ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ ಇಲ್ಲ ಎಂಬ ಕಾರಣವನ್ನು ಮುಂದಿಟ್ಟು ಅಜಿತ್ ಅಗರ್ಕರ್ ರಿಷಭ್ ಪಂತ್ ಅವರನ್ನು ಮೊದಲ ವಿಕೆಟ್ ಕೀಪರ್ ಬ್ಯಾಟರ್ ಎಂಬ ವಾದ ಮುಂದಿಟ್ಟಿದ್ದರು.ಆದರೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಗೌತಮ್ ಗಂಭೀರ್ ಹೊಸ ದಾಳ ಉದುರಿಸಿದರು. ರಿಷಭ್ ಪಂತ್ ಅವರನ್ನು ಕೈ ಬಿಟ್ಟು ಕೆಎಲ್ ರಾಹುಲ್ ಅವರನ್ನು ವಿಕೆಟ್ ಕೀಪರ್ ಆಗಿ ಕಣಕ್ಕಿಳಿಸಿದರು.ಅತ್ತ ಅಜಿತ್ ಅಗರ್ಕರ್ ಮುಂದಿಟ್ಟ ಸಮಸ್ಯೆಗೆ ಅಕ್ಷರ್ ಪಟೇಲ್ ಅವರನ್ನು ಮೇಲಿನ ಕ್ರಮಾಂಕದಲ್ಲಿ ಕಳುಹಿಸಿ ಉತ್ತರ ನೀಡಿದರು. ಈ ಮೂಲಕ ತೆರೆಮರೆಯ ಜಿದ್ದಾಜಿದ್ದಿಗೆ ಮೊದಲ ಉತ್ತರ ನೀಡಿದರು.ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ಅವರನ್ನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿ ಗೌತಮ್ ಗಂಭೀರ್, ರಿಷಭ್ ಪಂತ್ ಅವರನ್ನು ಬೆಂಚ್ ಕಾಯಿಸಿದರು. ಅಲ್ಲದೆ ಇಂಗ್ಲೆಂಡ್ ವಿರುದ್ಧ ಆಡಿದ ಬಳಗವನ್ನೇ ಚಾಂಪಿಯನ್ಸ್ ಟ್ರೋಫಿಯಲ್ಲೂ ಆಡಿಸುವುದಾಗಿ ತಿಳಿಸಿದರು. ಅಷ್ಟೇ ಅಲ್ಲದೆ ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ನಮ್ಮ ಮೊದಲ ಆಯ್ಕೆ ಎಂಬುದನ್ನು ಬಹಿರಂಗವಾಗಿಯೇ ಹೇಳಿದರು.ಈ ದೃಢ ನಿರ್ಧಾರದೊಂದಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕೆಎಲ್ ರಾಹುಲ್ ಅವರನ್ನು ಕಣಕ್ಕಿಳಿಸಿದರು. ಕೋಚ್ ತನ್ನ ಮೇಲಿಟ್ಟ ನಂಬಿಕೆಯನ್ನು ರಾಹುಲ್ ಹುಸಿಗೊಳಿಸಲಿಲ್ಲ. ಬಾಂಗ್ಲಾದೇಶ್ ವಿರುದ್ಧದ ಮೊದಲ ಪಂದ್ಯದಲ್ಲೇ 41 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.ಇನ್ನು ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ 23 ರನ್​ ಗಳಿಸಿ ತಂಡದ ಮೊತ್ತವನ್ನು 250ರ ಗಡಿ ತಲುಪಿಸಿದರು. ಹಾಗೆಯೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 42 ರನ್ ಬಾರಿಸಿ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು.ನಿರ್ಣಾಯಕವಾಗಿದ್ದ ಫೈನಲ್ ಪಂದ್ಯದಲ್ಲೂ ಕೆಎಲ್ ರಾಹುಲ್ ಮಿಂಚಿದರು. ಒತ್ತಡದ ಸನ್ನಿವೇಶದಲ್ಲಿ 33 ಎಸೆತಗಳನ್ನು ಎದುರಿಸಿ ಅಜೇಯ 34 ರನ್ ಬಾರಿಸಿದರು. ಅಲ್ಲದೆ ತಂಡವನ್ನು ಗುರಿ ಮುಟ್ಟಿಸಿ ಟೀಮ್ ಇಂಡಿಯಾಗೆ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.ಕೆಎಲ್ ರಾಹುಲ್ ಅವರ ಈ ಅದ್ಭುತ ಪ್ರದರ್ಶನದಿಂದಾಗಿ ಇದೀಗ ಗೌತಮ್ ಗಂಭೀರ್​ಗೆ ಗಜಬಲ ಸಿಕ್ಕಂತಾಗಿದೆ. ಏಕೆಂದರೆ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ವಿಫಲವಾಗಿದ್ದರೆ, ಅದರಲ್ಲೂ ಕೆಎಲ್ ರಾಹುಲ್ ವೈಫಲ್ಯ ಅನುಭವಿಸಿದ್ದರೆ ಗಂಭೀರ್ ತಲೆದಂಡವಾಗುವುದು ಬಹುತೇಕ ಖಚಿತವಾಗಿತ್ತು.ಆದರೀಗ ಎಲ್ಲವೂ ಗೌತಮ್ ಗಂಭೀರ್ ಅಂದುಕೊಂಡಂತೆ ನಡೆದಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಆಯ್ಕೆ ಸಮಿತಿಯ ಸದಸ್ಯರ ಒಲವಿಗಿಂತ ಗೌತಮ್ ಗಂಭೀರ್ ಅವರ ಬೇಡಿಕೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿದೆ. ಈ ಪ್ರಾಶಸ್ತ್ಯದೊಂದಿಗೆ ಟೀಮ್ ಇಂಡಿಯಾಗೆ ಅರ್ಹ ಆಟಗಾರರ ಎಂಟ್ರಿಯಾಗಲಿ ಎಂಬುದನ್ನು ಆಶಿಸೋಣ.



Related Articles

Leave a Reply

Your email address will not be published. Required fields are marked *

Back to top button