
ಪಟ್ಟಣದ ಅಗ್ನಿಶಾಮಕ ಠಾಣೆ ವತಿಯಿಂದ ಅಗ್ನಿಶಾಮಕ ಸಪ್ತಾಹ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.ಬೆಳಗ್ಗೆ ಅಗ್ನಿಶಾಮಕ ಠಾಣೆಯ ಕಚೇರಿಯಲ್ಲಿ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ರವರ ಅಧ್ಯಕ್ಷತೆಯಲ್ಲಿ ಪ್ರಭಾರಿ ಠಾಣಾಧಿಕಾರಿ ಚಂದ್ರಶೇಖರ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಅಗ್ನಿ ಅವಘಡದಲ್ಲಿ ಹುತಾತ್ಮರಾದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗೌರವ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು 14-4-1944ರಂದು ಮುಂಬೈ ಬಂದರಿನಲ್ಲಿ ಮದ್ದು ಗುಂಡುಗಳನ್ನು ಸಾಗಿಸುತ್ತಿದ್ದ ಎಸ್ಎಸ್ ಸ್ಪೋರ್ಟ್ಸ್ಪಿಕೈನ್ ಎಂಬ ಹಡಗು ಘೋರ ಅಗ್ನಿ ಅನಾಹುತಕ್ಕೆ ಒಳಗಾಗಿತ್ತು. ಆ ಸಂದರ್ಭದಲ್ಲಿ ಬೆಂಕಿ ನಂದಿಸಲು ಮುಂಬೆ, ಫೈರ್ ಬ್ರಿಗೇಡ್ನ ಅಧಿಕಾರಿ, ಸಿಬ್ಬಂದಿ ಕಾರ್ಯನಿರತರಾಗಿದ್ದ ಸಂದರ್ಭದಲ್ಲಿ ಹಡಗು ಸ್ಫೋಟಗೊಂಡು 66 ಜನ ಅಧಿಕಾರಿ-ಸಿಬ್ಬಂದಿಗಳು ಹುತಾತ್ಮರಾಗಿದ್ದರು. ಈ ಹುತಾತ್ಮರ ಸ್ಮರಣಾರ್ಥ ಏಪ್ರಿಲ್-14ನೇ ದಿನಾಂಕದಂದು ಅಗ್ನಿಶಾಮಕ ಸೇವಾ ದಿನಾಚರಣೆ ಯಾಗಿ ದೇಶದಾದ್ಯಂತ ಆಚರಿಸಲಾಗುತ್ತದೆ ಎಂದು ವಿವರಿಸಿದರು.
ಪ್ರಬಾರಿ ಠಾಣಾಧಿಕಾರಿ ಚಂದ್ರಶೇಖರ ಮಾತನಾಡಿ ಏಪ್ರಿಲ್ 14ರಿಂದ 20ರವರೆಗೆ ಅಗ್ನಿ ಶಾಮಕ ಸೇವಾ ಸಪ್ತಾಹದ ಅಂಗವಾಗಿ ಈ ಬಾರಿ “ಅಗ್ನಿ ಸುರಕ್ಷತೆಯ ಭಾರತವನ್ನು ಹುಟ್ಟುಹಾಕಲು ಒಂದಾಗೋಣ ದ್ಯೇಯವಾಕ್ಯದೊಂದಿಗೆ” ಸಾರ್ವಜನಿಕರಲ್ಲಿ ಅರಿವು ಜಾಗೃತಿ ಮೂಡಿಸಲಾಗುತ್ತಿದೆ. ನಾಗರಿಕರು ಅಗ್ನಿ ಅನಾಹುತ ಸಂಭವಿಸಿದಾಗ ಯಾವುದೇ ಆತಂಕಕ್ಕೆ ಒಳಗಾಗದೇ ಸಂಯಮದಿಂದ ಇಲಾಖೆ ನೀಡಿರುವ ಸಲಹೆ ಸೂಚನೆಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ ಪಂಕಜಾ ಪ್ರಕಾಶ್ ,ಉಪಾದ್ಯಕ್ಷೆ ಸೌಭಾಗ್ಯ ಉಮೇಶ್ ಸದಸ್ಯರಾದ ಗೀರೀಶ್ ವಿಶ್ವನಾಥ,ಹಿರಿಯ ಪತ್ರಕರ್ತರಾದ ಹರಿಚರಣ್ ತಿಲಕ್, ನೀಲಕಂಠ ,ಬಸವರಾಜು,ಉದ್ಯಮಿಗಳಾದ ರಾಜೇಶ್ , ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೋಕೇಶ್ ವಿ ಹಾಗು ಸಮಾಜದ ಹಲವಾರು ಗಣ್ಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.



