
ಹೊಸದಿಲ್ಲಿ: ಫೆಬ್ರುವರಿಯಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್, ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳು ಖರ್ಚು ಮಾಡಿದ ಹಣಕಾಸಿನ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ.ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ತನ್ನ 68 ಅಭ್ಯರ್ಥಿಗಳಿಗೆ ಬಿಜೆಪಿ ತಲಾ 25 ಲಕ್ಷ ರೂ.ಗಳಂತೆ ಒಟ್ಟು 17 ಕೋಟಿ ರೂ.ಗಳನ್ನು ನೀಡಿದೆ. ಆಪ್ ತನ್ನ 70 ಅಭ್ಯರ್ಥಿಗಳ ಪೈಕಿ 23 ಜನರಿಗೆ ಒಟ್ಟು 2.23 ಕೋಟಿ ರೂ.ಗಳನ್ನು ನೀಡಿದೆ. ಕಾಂಗ್ರೆಸ್ ತನ್ನ 70 ಅಭ್ಯರ್ಥಿಗಳ ಪೈಕಿ ಯಾರಿಗೂ ವೈಯಕ್ತಿಕವಾಗಿ ಹಣವನ್ನು ನೀಡಿಲ್ಲ. ಆಪ್ 10 ಲಕ್ಷ ರೂ.ಗಳನ್ನು ತನ್ನ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಿದೆ ಎಂದು ಚುನಾವಣಾ ಆಯೋಗಕ್ಕೆ ಪಕ್ಷಗಳು ಸಲ್ಲಿಸಿದ ವೆಚ್ಚದ ದಾಖಲೆಗಳಿಂದ ಬಹಿರಂಗಗೊಂಡಿದೆ.
ದಿಲ್ಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಪಕ್ಷಗಳು ಸಲ್ಲಿಸಿದ ವೆಚ್ಚದ ವಿವರಗಳು ಪ್ರಕಟವಾಗಿದೆ. ಚುನಾವಣಾ ಪ್ರಚಾರಕ್ಕಾಗಿ ಆಪ್ ಒಟ್ಟು 14.51 ಕೋಟಿ ರೂ.ಗಳನ್ನು ಖರ್ಚು ಮಾಡಿದರೆ ಕಾಂಗ್ರೆಸ್ ಪ್ರಚಾರಕ್ಕಾಗಿ 46.18 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.
ಬಿಜೆಪಿ ಇನ್ನೂ ತನ್ನ ಪೂರ್ಣ ವೆಚ್ಚದ ವರದಿಯನ್ನು ಸಲ್ಲಿಸಿಲ್ಲ. ವೆಚ್ಚದ ವರದಿಯಲ್ಲಿ ತನ್ನ ಎಲ್ಲಾಅಭ್ಯರ್ಥಿಗಳಿಗೆ ಸಮಾನವಾಗಿ ಹಣವನ್ನು ನೀಡಿದ್ದನ್ನು ಮಾತ್ರ ಉಲ್ಲೇಖಿಸಿದೆ.ಆಪ್ ಮಾಧ್ಯಮ ಜಾಹೀರಾತುಗಳು, ಪೋಸ್ಟರ್ಗಳು ಮತ್ತು ನೋಟಿಸ್ಗಳಿಗಾಗಿ 12.12 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ತನ್ನ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯ ಜಾಹೀರಾತುಗಳಿಗೆ 16 ಲಕ್ಷ ರೂ., ಗೂಗಲ್ ಜಾಹೀರಾತುಗಳಿಗಾಗಿ 2.24 ಕೋಟಿ ರೂ., ಫೇಸ್ಬುಕ್ನಲ್ಲಿ ಪ್ರಚಾರಕ್ಕಾಗಿ 73.57 ಲಕ್ಷ ರೂ.ಗಳನ್ನು ವೆಚ್ಚ ಮಾಡಿದೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಕ್ಷೇತ್ರಗಳಲ್ಲಿ ಬಿಜೆಪಿ 48 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. 6 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿತು. 70 ವಿಧಾನಸಭಾ ಕ್ಷೇತ್ರಗಳ ಪೈಕಿ 48 ಕ್ಷೇತ್ರಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಫೆಬ್ರುವರಿ 5 ರಂದು ನಡೆದ ಚುನಾವಣೆಯಲ್ಲಿ ಎಎಪಿ 22 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಶೂನ್ಯ ಸ್ಥಾನ ಗಳಿಸಿತ್ತು.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ ತಂದುಕೊಟ್ಟ ದೆಹಲಿ ಜನತೆಗೆ ಧನ್ಯವಾದ ಅರ್ಪಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರ ರಾಜಧಾನಿಯ ಜನತೆಯ ಸೇವೆ ಮಾಡಲು ಅವಕಾಶ ಲಭಿಸಿರುವುದು ಪಕ್ಷದ ಭಾಗ್ಯ ಎಂದು ಹೇಳಿದ್ದರು. ದೆಹಲಿ ಜನತೆ ಸುಳ್ಳು ಭರವಸೆಗಳ ಆಪ್ ರಾಜಕಾರಣವನ್ನು ತಿರಸ್ಕರಿಸಿದ್ದು, ಅಭಿವೃದ್ಧಿ ಪರವಾದ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದರು.


